ಸಂತೇಕೆಲ್ಲೂರು ಗ್ರಾ.ಪಂ ಪುಸ್ತಕ ಗೂಡು ಉದ್ಘಾಟನೆ
ಮಸ್ಕಿ : ಪುಸ್ತಕ ಓದುವ ಹವ್ಯಾಸದಿಂದ ಜ್ಞಾನ ವೃದ್ಧಿಯಾಗುವುದಲ್ಲದೇ, ವ್ಯಕ್ತಿತ್ವ ವಿಕಸನಕ್ಕೆ ನೆರವಾಗಲಿದೆ ಎಂದು ಸಂತೆಕಲ್ಲೂರಿನ ಘನಮಠೇಶ್ವರಮಠದ ಪೀಠಾಧಿಪತಿ ಗುರುಬಸವ ಮಹಾಸ್ವಾಮಿಗಳು ಹೇಳಿದರು.
ಸಂತೆಕಲ್ಲೂರಿನ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಬುಧವಾರ ಪುಸ್ತಕ ಗೂಡು ಉದ್ಘಾಟಿಸಿ ಮಾತನಾಡಿದರು.
ಮೊಬೈಲ್, ಸಾಮಾಜಿಕ ಜಾಲತಾಣಗಳ ಹಾವಳಿಯಿಂದ ಪುಸ್ತಕ ಓದುವ ಹವ್ಯಾಸ ಕಣ್ಮರೆಯಾಗುತ್ತಿದೆ. ಮಕ್ಕಳ ಮುಂದೆ ಪಾಲಕರು ಮೊಬೈಲ್ ಬಳಸುವುದು, ಟಿವಿ ನೋಡುವುದು ಮಾಡಿದರೆ, ಮಕ್ಕಳು ಸಹ ಅದೇ ಹವ್ಯಾಸ ರೂಢಿಸಿಕೊಳ್ಳುತ್ತಾರೆ. ಬದಲಾವಣೆ ಎಂಬುದು ಮೊದಲು ಮನೆಯಿಂದಲೇ ಆರಂಭವಾಗಬೇಕು. ಈ ನಿಟ್ಟಿನಲ್ಲಿ ಪಾಲಕರು ಮಕ್ಕಳಲ್ಲಿ ಪುಸ್ತಕ ಓದುವ ಅಭಿರುಚಿ ಬೆಳೆಸಬೇಕು. ಅನೇಕ ಮಹನೀಯರು ಹಗಲು ರಾತ್ರಿ ಎನ್ನದೇ ಜ್ಞಾನರ್ಜನೆ ಮಾಡಿ, ದೇಶ ನಿರ್ಮಾಣಕ್ಕೆ ಶ್ರಮಿಸಿದ್ದಾರೆ. ವ್ಯಕ್ತಿ ನಿರ್ಮಾಣದಿಂದ ದೇಶ ನಿರ್ಮಾಣ ಎಂಬುದನ್ನು ಪ್ರತಿಯೊಬ್ಬರು ಅರ್ಥ ಮಾಡಿಕೊಂಡು ಕೇವಲ ತರಗತಿಯ ಪಠ್ಯ ಪುಸ್ತಕಕ್ಕೆ ಸೀಮಿತವಾಗದೇ ಜೀವನ ರೂಪಿಸುವ ಪುಸ್ತಕ ಓದಬೇಕು ಎಂದರು.
ಮಸ್ಕಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳಾದ ಅಮರೇಶ್ ಮಾತನಾಡಿ, ಮಕ್ಕಳಲ್ಲಿ ಪುಸ್ತಕ ಓದುವ ಅಭ್ಯಾಸ ರೂಢಿಸಬೇಕು ಎಂಬ ಉದ್ದೇಶದಿಂದ ಪುಸ್ತಕ ಗೂಡು ಆರಂಭಿಸಲಾಗಿದೆ. ಪಾಲಕರು ಮಕ್ಕಳ ಚಟುವಟಿಕೆ ಮೇಲೆ ನಿಗಾ ವಹಿಸಿ, ಅವರ ಭವಿಷ್ಯ ರೂಪಿಸಲು ಕೈಜೋಡಿಸಬೇಕು ಎಂದರು.
ಇದೇ ಸಂದರ್ಭದಲ್ಲಿ ಸಂತೆಕಲ್ಲೂರು ಮಹಾಂತಿನಮಠದ ಶ್ರೀ ಮಹಾಂತ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಗ್ರಾಪಂ ಅಧ್ಯಕ್ಷರಾದ ಅಂಬಮ್ಮ ಅಧ್ಯಕ್ಷತೆ ವಹಿಸಿದ್ದರು. ಗ್ರಾ.ಪಂ ಸದಸ್ಯರಾದ ವೀರಭದ್ರಪ್ಪ ಗೋನ್ವಾರ್, ವಾಜೀರ್ ಹುಸೇನ್ಸಾಬ್, ಮಲ್ಲಯ್ಯ ನಾಯಕ, ಮುಖಂಡರಾದ ಅಮರಪ್ಪ ಪ್ಯಾಟಿಹಾಳ, ಸೂಗನಗೌಡ, ಬಸವರಾಜ್, ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಾದ ನಾಗರಾಜ್, ಸಿಬ್ಬಂದಿ ಅಯ್ಯನಗೌಡ, ರಾಜೀವ್ ಗಾಂಧೀ ಫೆಲೋ ವಿನೋದ್, ಎಬಿಪಿ ಫೆಲೋ ಅಶೋಕ್, ಗ್ರಾ.ಪಂಗ್ರಂಥಪಾಲಕ ನಾಗರಾಜ್ ಕೊಳೊರು, ಶಾಲಾ ಶಿಕ್ಷಕರಾದ ಬಸವರಾಜ್ ಹಿರೇಮಠ ಶಾಲಾ ವಿದ್ಯಾರ್ಥಿಗಳು ಇದ್ದರು.

ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ