ಸಸಿಗಳನ್ನು ನೆಟ್ಟು ಆಕ್ಸಿಜನ್ ಕ್ರಾಂತಿ ಯೋಜನೆ ಅಭಿಯಾನ ಕೈಗೊಳ್ಳುತ್ತಿರುವುದು ಶ್ಲಾಘನೀಯ ಕಾರ್ಯ : ಪರಿಸರ ಪ್ರೇಮಿ ಬಾನು ಪ್ರಕಾಶ್ ಖೇಣೆದ್
ದೇವದುರ್ಗ : ತಾಲೂಕಿನ ಕೊಪ್ಪರ ಗ್ರಾಮದ ಪಿ.ಎಂ.ಶ್ರೀ ಸರಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ "ಪರಿಸರ ಜಾಗೃತಿ ಕಾರ್ಯಕ್ರಮ" ಅದ್ದೂರಿಯಾಗಿ ಜರುಗಿತು.ಕಾರ್ಯಕ್ರಮವನ್ನು ಪರಿಸರ ರಾಜ್ಯ ಪ್ರಶಸ್ತಿ ಪುರಸ್ಕೃತರು,ವನಸಿರಿ ಪೌಂಡೇಷನ್ ರಾಜ್ಯಾಧ್ಯಕ್ಷರಾದ ಅಮರೇಗೌಡ ಮಲ್ಲಾಪುರ ಅವರು ಸಸಿ ನೆಟ್ಟು ನೀರುಣಿಸುವ ಮೂಲಕ ಚಾಲನೆ ನೀಡಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಖ್ಯಾತ ಉದ್ದಿಮೆದಾರರು ಹಾಗೂ ಸಮಾಜ ಸೇವಕರಾದ ಬಾನು ಪ್ರಕಾಶ್ ಖೇಣೆದ್ ಮಾತನಾಡಿ ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯ. ಪರಿಸರವನ್ನು ನಾವು ಕಾಪಾಡಿದರೆ ಪರಿಸರ ನಮ್ಮನ್ನು ಕಾಪಾಡುತ್ತದೆ.ಪ್ರತಿ ವರ್ಷ ಜೂನ್ 5 ಕ್ಕೆ ವಿಶ್ವ ಪರಿಸರ ದಿನ ಆಚರಿಸುತ್ತೇವೆ.ಪರಿಸರ ದಿನಾಚರಣೆ ಕೇವಲ ಒಂದೇ ದಿನಕ್ಕೆ ಸೀಮೆತವಾಗದೆ ಪ್ರತಿ ದಿನ ಆಚರಿಸಬೇಕು.ವನಸಿರಿ ಪೌಂಡೇಷನ್ ತಂಡ ಅಮರೇಗೌಡ ಮಲ್ಲಾಪುರ ನೇತೃತ್ವದಲ್ಲಿ ಪ್ರತಿ ದಿನ ಪರಿಸರ ದಿನಾಚರಣೆ ಆಚರಿಸುತ್ತಿದ್ದಾರೆ. ಪರಿಸರ ಮಾಲಿನ್ಯ ತಡೆಯುವ ನಿಟ್ಟಿನಲ್ಲಿ ಸಸಿ ನೆಟ್ಟು ಆಕ್ಸಿಜನ್ ಕ್ರಾಂತಿ ಯೋಜನೆ ಅಭಿಯಾನ ಪ್ರಾರಂಭಿಸಿ ಶಾಲಾ ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ಪರಿಸರ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಪರಿಸರ ಪ್ರಜ್ಞೆ ಮೂಡಿಸುತಿದ್ದಾರೆ ನಿಜಕ್ಕೂ ವನಸಿರಿ ತಂಡ ಕಾರ್ಯ ಶ್ಲಾಘನೀಯ. ದೇವದುರ್ಗವನ್ನು ಹಸಿರುಕರಣ ಮಾಡುವಲ್ಲಿ ವನಸಿರಿ ತಂಡದ ಜೊತೆಗೆ ಕೈಜೋಡಿಸಲು ಸದಾಕಾಲ ಸಿದ್ಧರಿದ್ದೇವೆ ಎಂದು ತಿಳಿಸಿದರು.
ನಂತರ ಪರಿಸರ ಪ್ರೇಮಿ ನಾಗರಾಜ ಪಾಟೀಲ ಮಾತನಾಡಿ ಸರಕಾರಿ ಶಾಲೆಯಲ್ಲಿ ಓದುವ ನೀವೆಲ್ಲ ಮುಂದೊಂದು ದಿನ ದೊಡ್ಡ ಅಧಿಕಾರಿಗಳಗುತ್ತೀರಿ ಆದರೆ 0 ದಿಂದ ಹೀರೋಗಳು ಆಗಬೇಕಾದರೆ ಪರಿಸರ ರಕ್ಷಣೆ ಮಾಡಬೇಕು.ನೀವುಗಳೆಲ್ಲರೂ ಹುಟ್ಟುಹಬ್ಬಕ್ಕೆ ಒಂದು ಗಿಡ ನೆಟ್ಟರೆ ಅದು ನಿಮಗೆ ಅಷ್ಟೇ ನೆರಳು ಕೊಡುವುದಿಲ್ಲ,ನಿಮ್ಮ ಸುತ್ತಮುತ್ತಲಿನ ಎಲ್ಲರಿಗೂ ನೆರಳು ನೀಡುವುದರ ಜೊತೆಗೆ ಫಲವನ್ನು ನೀಡುತ್ತದೆ.ನೀವು ನೆಟ್ಟ ಗಿಡ ಮುಂದೆ ಒಂದು ದಿನ ದೊಡ್ಡ ಹೆಮ್ಮರವಾಗಿ ಬೆಳೆದಾಗ ಅಲ್ಲಿನ ಪರಿಸವೇ ನೀವು ನೆಟ್ಟ ಗಿಡ ಎಂದು ಗುರುತಿಸುತ್ತದೆ. ಅದಕ್ಕೆ ವನಸಿರಿ ಅಮರೇಗೌಡ ಮಲ್ಲಾಪುರ ಅವರು ಪ್ರತಿಯೊಬ್ಬರೂ ಹುಟ್ಟುಹಬ್ಬದ ಅಂಗವಾಗಿ ಒಂದೊಂದು ಗಿಡವನ್ನು ನೆಟ್ಟು ಆಚರಿಸಿಕೊಳ್ಳಿ ಎಂದು ತಿಳಿಸಿದ್ದಾರೆ. ಆದುದರಿಂದ ಪ್ರತಿಯೊಬ್ಬರೂ ಗಿಡಗಳನ್ನು ನೆಟ್ಟು ಪೋಷಣೆ ಮಾಡಬೇಕು ಎಂದು ತಿಳಿಸಿದರು.
ನಂತರ ವನಸಿರಿ ಅಮರೇಗೌಡ ಮಲ್ಲಾಪುರ ಮಾತನಾಡಿ ಪರಿಸರ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿ.ಹಲವಾರು ಯೋಜನೆಗಳ ಮೂಲಕ ನಮ್ಮ ವನಸಿರಿ ತಂಡ ಕಲ್ಯಾಣ ಕರ್ನಾಟಕವನ್ನು ಹಸಿರುಕರಣ ಮಾಡಲು ಫಣ ತೊಟ್ಟಿದ್ದೇವೆ.ಇದೀಗ ದೇವದುರ್ಗ ತಾಲೂಕನ್ನು ಹಸಿರುಕರಣ ಮಾಡಲು ನಮ್ಮ ತಂಡ ತಯಾರಾಗಿದೆ. ತಾಲೂಕಿನ ಎಲ್ಲ ಪರಿಸರ ಪ್ರೇಮಿಗಳು ಇದಕ್ಕೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಇದೇವೇಳೆ ಶಾಲಾ ವಿದ್ಯಾರ್ಥಿಗಳಿಗೆ ಪರಿಸರ ಪ್ರತಿಜ್ಞೆ ಮಾಡಿಸಿ ಪರಿಸರ ಜಾಗೃತಿಯ ಘೋಷಣೆಗಳನ್ನು ಕೂಗಲಾಯಿತು.
ಈ ಸಂಧರ್ಭದಲ್ಲಿ ಸುಭಾಷ್ ಪಾಟೀಲ್ ಪ್ರಾಚಾರ್ಯರು, ರಾಜ್ಯ ವನಸಿರಿ ಪೌಂಡೇಷನ್ ಜಾಲತಾಣದ ಅಧ್ಯಕ್ಷ ಚನ್ನಪ್ಪ ಕೆ ಹೊಸಹಳ್ಳಿ,ದೇವದುರ್ಗ ತಾಲೂಕ ಅಧ್ಯಕ್ಷ ಪ್ರಕಾಶ ಪಾಟೀಲ್,ಮುಖ್ಯಗುರು ಶರಣಪ್ಪ,ಸದಸ್ಯ ಸುನಿಲ್ ಜಾಡಲದಿನ್ನಿ,ಶಿಕ್ಷಕರಾದ ಕಲ್ಲಪ್ಪ,ಕು.ಮಂಜುಳಾ,ಖಾಸಿಂ,ಸಿದ್ದಪ್ಪ,ವಿನೋದ,ವಿವೇಕಾನಂದ,ನರಸಿಂಹ,ಬಸಲಿಂಗಪ್ಪ, ಮಲ್ಲಪ್ಪ,ಜಯಶ್ರೀ,ಸಫೆದಾ, ನಿರ್ಮಲ,ಅಂಬಮ್ಮ ಹಾಗೂ ವಿದ್ಯಾರ್ಥಿಗಳು ಇದ್ದರು.


ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ