ಕೊಟ್ಟೂರು ಪವಿತ್ರ ರಂಜಾನ್ ಹಬ್ಬ ಆಚರಣೆ
ಕೊಟ್ಟೂರು ಪವಿತ್ರ ರಂಜಾನ್ ಹಬ್ಬವನ್ನು ಪಟ್ಟಣದ ಮುಸ್ಲಿಂ ಭಾಂದವರು ಸೋಮವಾರ ಸಡಗರ ಸಂಭ್ರಮಗಳೊಂದಿಗೆ ಆಚರಿಸಿದರು, ಇಲ್ಲಿನ ಪ್ರಮುಖ ಮಸೀದಿಗಳಲ್ಲಿ ಹಬ್ಬದ ನಿಮಿತ್ತವಾಗಿ ಮುಸ್ಲಿಂ ಆರಾಧ್ಯ ದೈವ ಅಲ್ಲಾಹುವಿನ ನಾಮಸ್ಮರಣೆ ಬೆಳೆಗ್ಗೆ ೯ ರಿಂದಲೇ ಮಾರ್ದನಿಸಿದವು. ಪಟ್ಟಣದ ಬಿಲಾಲ್, ಉಸ್ಮಾನಿಯ, ಜಾಮೀಯ, ಮುಬಾರಕ್, ಇಲಾಹಿ,ತೌಹಿದ್ ಮಸೀದಿಗಳಿಂದ ಮುಸ್ಲಿಂ ಜನಾಂಗದವರು ನೂರಾರು ಸಂಖ್ಯೆಯಲ್ಲಿ ಜಮಾವಣೆ ಗೊಂಡು ಪಾದಯಾತ್ರೆಯ ಮೆರವಣಿಗೆ ಕೈಗೊಂಡರು. ನಂತರ ಇಲ್ಲಿನ ಹಗರಿಬೊಮ್ಮನಹಳ್ಳಿ ರಸ್ತೆಯಲ್ಲಿನ ಖಬರ್ಸ್ಥಾನದಲ್ಲಿ ಕೂಡಿಕೊಂಡು ಸಾಮೂಹಿಕ ಪ್ರಾರ್ಥನೆ ಕೈಗೊಂಡರು. ಧರ್ಮಗುರುಗಳಾದ ಖಾರಿ ಹಾಫೀಜ್ ಇಮ್ರಾನ್ ರವರು ನೆರೆದಿದ್ದ ಭಾಂದವರಿಗೆ ಧರ್ಮೊಪದೇಶ ನೀಡಿ ಪ್ರಾರ್ಥನೆಯನ್ನು ಭೋದಿಸಿದರು. ಇವರ ಅಜ್ಞಾನುಸಾರ ಜನಾಂಗದ ಭಾಂದವರು ರಾಗಬದ್ದವಾಗಿ ಅಲ್ಲಾಹುನನ್ನು ಸ್ಮರಿಸಿ ನಮಸ್ಕರಿಸಿದರು. ನಂತರ ಪರಸ್ಪರ ಒಬ್ಬರನ್ನು ಒಬ್ಬರು ಆಲಂಗಿಸಿಕೊಂಡು ಈದ್-ಮುಬರಕ್ ಹೇಳಿಕೊಂಡರು. ಈ ಸುಸಂಧರ್ಭದಲ್ಲಿ ಹಾಫೀಜ್ ಜಬಿ ಉಲ್ಲಾ, ಹಾಫೀಜ್ ಸಾಜೀದ್, ಮುಫ್ತಿ ಯಾಸೀನ್, ಹಾಫೀಜ್ ಚಾಂದ್ ಭಾಷಾ, ಅಯೂಬ್ ಖಾನ್, ನೂರುಲ್ಲಾ ಖಾನ್, ನಜೀರ್ ಸಾಬ್, ಬಾಷಾ ಸಾಬ್ ಇನ್ನು ಮಸೀದಿಯ ಪ್ರಮುಖ ಮುಖಂಡರು ಸೇರಿದ್ದರು ಹಾಗೂ ಪೊಲೀಸ್ ಸಿಬ್ಬಂದಿಗಳಿಗೆ ಸ್ವಾಗತ ಕೋರಿ ಧನ್ಯವಾದಗಳು ತಿಳಿಸಿದರು.